Contact For Add

ರೈತರ ಬವಣೆ ತೆರೆದಿಡುವ ‘ರೈತ ಇನ್ನಿಲ್ಲ’ ಕಿರುಚಿತ್ರ


ಯುಟ್ಯೂಬ್‌ನಲ್ಲಿ ಸದ್ದು ಮಾಡಿರುವ ಉತ್ತರ ಕರ್ನಾಟಕ ಹುಡುಗರ ಕಿರುಚಿತ್ರ – ‘ರೈತ ಇನ್ನಿಲ್ಲ’

ಜಗತ್ತಿಗೆ ಅನ್ನ ನೀಡುವ ಶಕ್ತಿ ಇರುವುದು ರೈತನಿಗೆ ಮಾತ್ರ. ಭೂಮಿ ತಾಯಿಯ ನಂಬಿ ಜೀವನವನ್ನೇ ಕೃಷಿಯಲ್ಲಿ ಮುಡಿಪಿಡುವ ಜೀವ ಅದು. ಅದಕ್ಕೆ ದೇಶದ ಬೆನ್ನೆಲುಬು ಯಾರು ಎಂದೊಡನೆ, ನಮ್ಮಿಂದ ರೈತ ಎಂಬ ಉತ್ತರ ಬರುತ್ತದೆ. ಆದರೆ, ಇಂದು ಆ ಬೆನ್ನೆಲುಬು ಬಾಗಿದೆ. ಅದು ದೇಶಕ್ಕೆ ಕಂಟಕದ ಸಂಕೇತವೂ ಹೌದು. ಆಡಳಿತ ವರ್ಗವು ರೈತರನ್ನು ನೋಡುವ ದೃಷ್ಟಿಕೋನವೇ ಬದಲಾಗಿದೆ. ಅನ್ನ ಹಾಕುವ ರೈತರ ಹೊಟ್ಟೆಗೆ ವಿಷವುಣಿಸುವ ಜಂತುಗಳು ನಮ್ಮಲ್ಲಿ ಹೆಚ್ಚಾಗುತ್ತಿದ್ದಾರೆ. ರೈತನನ್ನು ಹದ್ದಿನಂತೆ ಕೊಕ್ಕಿ ತಿನ್ನುತ್ತಿದ್ದಾರೆ. ಅದರ ಮಧ್ಯೆ ರೈತ, ಬಸವಳಿದಿದ್ದಾನೆ.
ಇಂಥ ರೈತ, ಪ್ರಸಕ್ತ ದಿನಮಾನಗಳಲ್ಲಿ ಅನುಭವಿಸುತ್ತಿರುವ ಯಾತನೆ ಹಾಗೂ ಸಮಸ್ಯೆಗಳ ಎಳೆಯನ್ನು ಇಟ್ಟುಕೊಂಡಿ ``ರೈತ ಇನ್ನಿಲ್ಲ' ಎಂಬ ಕಿರುಚಿತ್ರ  ನಿರ್ಮಾಣ ಮಾಡಲಾಗಿದೆ. ಉತ್ತರ ಕರ್ನಾಟಕದ ಹುಡುಗರು ಕಟ್ಟಿಕೊಂಡಿರುವ `ಮೀಡಿಯಾ ಮೈಂಡ್ ಕ್ರಿಯೆಷನ್ಸ್' ಅಡಿಯಲ್ಲಿ ನಿರ್ಮಾಣಗೊಂಡಿರುವ ಈ ಕಿರುಚಿತ್ರವು ಇಂದಿನ ರೈತರ ಬದುಕಿಗೆ ಹಿಡಿದ ಕನ್ನಡಿಯಂತಿದೆ.
2017ರಲ್ಲಿ ರಾಜ್ಯದಲ್ಲಿ ಸಾಕಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಆ ರೈತರ ಕುಟುಂಬಗಳು ಅನಾಥವಾದವು. ಉತ್ತರ ಕರ್ನಾಟಕದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ರೈತರೊಬ್ಬರ ಜೀವನ ಕಥೆಯನ್ನೇ ಆಧಾರವಾಗಿಟ್ಟುಕೊಂಡು ಈ ಕಿರುಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ಇತ್ತೀಚೆಗೆ ಧಾರವಾಡದ ಜೆಎಸ್‍ಎಸ್ ಸಂಸ್ಥೆಯ ಸಭಾಭವನಲ್ಲಿ ಈ ಕಿರುಚಿತ್ರವನ್ನು ಬಿಡುಗಡೆಗೊಳಿಸಲಾಯಿತು.
ನಿತ್ಯವೂ ಭೂಮಿ ತಾಯಿ ನಂಬಿ ಹಾಸಿಗೆಯಿಂದ ಮೇಲೆಳುವ ರೈತರಿಗೆ ಹೊಲ, ಬೆಳೆಯದ್ದೇ ಚಿಂತೆ. ಯಾರೇ ಏನೇ ಮಾಡಿದರೂ ಆತ ಉಳುವುದನ್ನು ಬಿಡುವುದಿಲ್ಲ. ಆದರೆ, ಇಂದಿನ ವ್ಯವಸ್ಥೆಯು ಆತನ ಲೆಕ್ಕಾಚಾರವನ್ನೇ ಬುಡಮೇಲು ಮಾಡಿದೆ. ಬರಗಾಲ, ಬೆಳೆದ ಬೆಳೆಗೆ ಬೆಲೆ ಸಿಗದಿರುವುದು, ಸಾಲ, ಬಡ್ಡಿ ಕುಳಗಳ ಕಾಟ, ಹೀಗೆ ನಾನಾ ಸಮಸ್ಯೆಗಳಿಂದ ಕುಗ್ಗುತ್ತಿರುವ ರೈತನ ಕಣ್ಣೀರು ಒರೆಸುವವರು ಯಾರು ಇಲ್ಲದಂತಾಗಿದೆ. ಇಂಥ ರೈತರ ಯಾತನೆಯನ್ನು ಈ ಕಿರುಚಿತ್ರದಲ್ಲಿ ಕಾಣಬಹುದು.
``ಬಿತ್ತಿದ ಬೆಳೆ ಕೈಕೊಟ್ಟಿದ್ದರಿಂದ ಕಂಗೆಟ್ಟ ರೈತ, ತನ್ನ ಮಕ್ಕಳಿಗೆ ತುತ್ತು ಅನ್ನ ಹಾಕದ ಸ್ಥಿತಿಗೆ ಬಂದು ನಿಲ್ಲುತ್ತಾನೆ. ಬೆಳೆ ಹಾನಿಗೆ ಸರ್ಕಾರ ನೀಡಿದ ಪರಿಹಾರ ಧನ, ಗ್ರಾಮ ಲೆಕ್ಕಾಧಿಕಾರಿಯ ಕುತಂತ್ರದಿಂದ ರೈತನ ಕೈ ತಪ್ಪುತ್ತದೆ. ಸಾಲ ಕೊಟ್ಟ ಊರಿನ ಗೌಡ ಹಾಗೂ ಬ್ಯಾಂಕ್ ಅಧಿಕಾರಿಗಳ ಕಾಟವೂ ವಿಪರೀತವಾಗುತ್ತದೆ. ಅದೇ ವೇಳೆ, ಶುಲ್ಕ ಕಟ್ಟಲಿಲ್ಲವೆಂದು ರೈತನ ಮಕ್ಕಳನ್ನು ಶಾಲೆಯಿಂದ ಹೊರಹಾಕಲಾಗುತ್ತದೆ. ಇಂಥ ಸಂದಿಗ್ಧ ಸ್ಥಿತಿಯಲ್ಲಿ ರೈತನ ಕಷ್ಟಕ್ಕೆ ಪರಿಹಾರವೇ ಸಿಗುವುದಿಲ್ಲ. ಆಗ ಆತ ತೆಗೆದುಕೊಳ್ಳುವ ನಿರ್ಧಾರವೇನು?' ಎಂಬುದೇ ಈ ಕಿರುಚಿತ್ರದ ಕಥೆ.
ಧಾರವಾಡ ಹಾಗೂ ಸಮೀಪದ ಸೋಮಾಪುರದಲ್ಲಿ ಈ ಕಿರುಚಿತ್ರವನ್ನು ಚಿತ್ರೀಕರಿಸಲಾಗಿದ್ದು, ಪ್ರತಿಯೊಂದು ದೃಶ್ಯವನ್ನು ಕಣ್ಣಿಗೆ ಕಟ್ಟುವಂತೆ ಮೂಡಿಬಂದಿದೆ. ಸನ್ನಿವೇಶಕ್ಕೆ ತಕ್ಕ ಸಂಭಾಷಣೆಗಳು ಮನಮುಟ್ಟುತ್ತವೆ. ನೋಡುಗರ ಕಣ್ಣಗಳನ್ನು ಅವು  ಒದ್ದೆಯಾಗಿಸುತ್ತವೆ.

ಈಗಾಗಲೇ ಹಲವು ಸಾಮಾಜಿಕ ಸಂದೇಶದ ಕಿರುಚಿತ್ರಗಳನ್ನು ನಿರ್ಮಿಸಿ ಯಶಸ್ವಿಯಾಗಿರುವ ಸಂತೋಷ್ ಜಿ. ಅವರ ನಿರ್ದೇಶನವು ಈ ``ರೈತ ಇನ್ನಿಲ್ಲ' ಕಿರುಚಿತ್ರಕ್ಕಿದೆ. ಚಿತ್ರಕಥೆ, ಸಂಭಾಷಣೆ, ಸಂಕಲನ ಅವರದ್ದೇ ಆಗಿದ್ದರಿಂದ ನಿರ್ದೇಶಕರ ಯೋಚನೆಯಂತೆ ಚಿತ್ರ ಮೂಡಿಬಂದಿದೆ.
ಖಾಸಗಿ ಸುದ್ದಿ ವಾಹಿನಿಯಲ್ಲಿ ಕೆಲಸ ಮಾಡಿದ ಅನುಭವವಿರುವ ಬಸವರಾಜ ಗೋಕಾವಿ ಈ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ. ಹೊಲದ ಕಪ್ಪು ಮಣ್ಣು, ರೈತನ ರೋದನೆಗಳನ್ನು ವಿಶಿಷ್ಟವಾಗಿ ಸೆರೆ ಹಿಡಿಯುವ ಮೂಲಕ ಚಿತ್ರಕ್ಕೆ ಜೀವ ತುಂಬಿದ್ದಾರೆ. ವಿಶ್ವಪ್ರೇಮಿ ಖ್ಯಾತಿಯ ಬೆಳಗಾವಿಯ ವಿಜಯ ಹಂಜಿ ಅವರ ಸಂಗೀತ ಈ ಕಿರುಚಿತ್ರಕ್ಕಿದೆ.
ಹೊಸಬರ ತಂಡ:
20 ನಿಮಿಷವಿರುವ ``ರೈತ ಇನ್ನಿಲ್ಲ' ಕಿರುಚಿತ್ರದ ಪಾತ್ರಗಳಿಗೆ ಜೀವ ತುಂಬಿದ ಪ್ರತಿಯೊಬ್ಬ ನಟ, ನಟಿಯರು ಹೊಸಬರು. ರೈತನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಶಿವಾನಂದ ಬಮ್ಮಿಗಟ್ಟಿ ಅವರು ವೃತ್ತಿಯಲ್ಲಿ ವಕೀಲರು. ಗ್ರಾಮೀಣ ಪ್ರದೇಶದಿಂದ ಬಂದ ಅವರು, ರೈತನ ಪಾತ್ರಕ್ಕೆ ನೈಜತೆಯ ಜೀವ ತುಂಬಿದ್ದಾರೆ. ಅವರ ಪತ್ನಿ ಪಾತ್ರದಲ್ಲಿ ಮಮತಾ ಹಿರೇಮಠ, ಮಕ್ಕಳ ಪಾತ್ರದಲ್ಲಿ ಸ್ನೇಹಾ ವಿಜಾಪುರ ಹಾಗೂ ಚಿರಂತ್ ಕುಂಬಾರ್ ಕಾಣಿಸಿಕೊಂಡಿದ್ದಾರೆ.
ಮಿಥುನ್ ಶಿಂಧೆ, ಎಚ್.ಭಾಸ್ಕರ್, ದುಂಡಯ್ಯ ಹಿರೇಮಠ, ರವಿ ಚಿತ್ತರಗಿ, ವರ್ಷಾ ಅಂಗಡಿ, ರಾಮಚಂದ್ರ ಕುಲಕರ್ಣಿ (ಆರ್.ಕೆ), ವಿಶಾಲ್ ಕುಮಾರ್ ಹಾಲಟ್ಟಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ಇವರೆಲ್ಲರೂ ಹೊಸಬರು. ಮೊದಲ ಬಾರಿಯ ಅಭಿನಯದಲ್ಲೇ ಸೈ ಎನಿಸಿಕೊಂಡಿದ್ದಾರೆ.

ಮಿಡಿಯಾ ಮೈಂಡ್ ಬಗ್ಗೆ:
ಸಿನಿಮಾ ಮಾಡಬೇಕು, ಅದರಲ್ಲಿ ನಟಿಸಬೇಕೆಂಬ ಮಹದಾಸೆಯಿಂದ ರಾಜಧಾನಿ ಬೆಂಗಳೂರಿಗೆ ಹೋಗುವ ಜನರ ಸಂಖ್ಯೆ ಇಂದು ಹೆಚ್ಚಿದೆ. ಆದರೆ, ಅದನ್ನು ಸಾಧಿಸುವವರು ಕಮ್ಮಿ. ಮೋಸ ಹೋಗುವವರೆ ಹೆಚ್ಚು. ಹೀಗಾಗಿ ದೂರದ ರಾಜಧಾನಿಗೆ ಹೋಗುವ ಬದಲು, ನಮ್ಮ ನೆಲದಲ್ಲೇ ಸಾಮಾಜಿಕ ಸಂದೇಶದ ಕಿರುಚಿತ್ರ ನಿರ್ಮಿಸುವ ಉದ್ದೇಶದಿಂದ ``ಮಿಡಿಯಾ ಮೈಂಡ್ ಕ್ರಿಯೆಷನ್ಸ್'' ಹುಟ್ಟಿಕೊಂಡಿದೆ. ವಿವಿಧ ಕ್ಷೇತ್ರದಲ್ಲಿ ದುಡಿಯುತ್ತಿರುವ ತಂಡದ ಸದಸ್ಯರು, ತಮ್ಮ ಸಂಬಳವನ್ನೇ ಒಟ್ಟುಗೂಡಿಸಿ ಚಿತ್ರ ನಿರ್ಮಾಣ ಮಾಡುತ್ತಿರುವುದು ಅವರ ಸ್ವಾಭಿಮಾನಕ್ಕೆ ಹಿಡಿದ ಕನ್ನಡಿ.
 
ಉತ್ತರ ಕರ್ನಾಟಕದ ಹುಡುಗರ ತಂಡವೇ ಇದರಲ್ಲಿದೆ. ಈಗಾಗಲೇ ``ಪಶ್ಚಾತಾಪ'', ``ರೂಮ್ ನಂ. 12'', ``ಆತ್ಮಹತ್ಯೆ ಮಹಾಪಾಪ'' ಕಿರುಚಿತ್ರಗಳನ್ನು ನಿರ್ಮಿಸಿ ಈ ತಂಡವು ಸೈ ಎನಿಸಿಕೊಂಡಿದೆ. ಈ ಕಿರುಚಿತ್ರಗಳನ್ನು ``ಮಿಡಿಯಾ ಮೈಂಡ್ 24x7(meಜiಚಿ miಟಿಜ 24x7)' ಹೆಸರಿನ ಯುಟ್ಯೂಬ್ ಚಾನೆಲನಲ್ಲಿ ಈಗಾಗಲೇ ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾರೆ. ಪ್ರತಿ ಬಾರಿಯೂ ಹೊಸಬರಿಗೆ ಅವಕಾಶ ನೀಡುತ್ತಿರುವುದು ಈ ತಂಡದ ವಿಶೇಷತೆ.
ನಟನೆಯಲ್ಲಿ ಆಸಕ್ತಿ ಇರುವವರು: ಮೊ. 94488-41652 ಸಂಪರ್ಕಿಸಬಹುದು.




ಕೋಟ್:
ರೈತರ ಬವಣೆಗೆ ಆಡಳಿತ ವ್ಯವಸ್ಥೆಯು ಸ್ಪಂದಿಸಬೇಕು ಎಂಬುದು ನಮ್ಮ ಈ ಕಿರುಚಿತ್ರದ ಉದ್ದೇಶ. ಮುಂಬರುವ ದಿನಗಳಲ್ಲೂ ಸಾಮಾಜಿಕ ಸಮಸ್ಯೆಯ ಕಥೆಗಳನ್ನು ಇಟ್ಟುಕೊಂಡು ಕಿರುಚಿತ್ರ ನಿರ್ಮಿಸುವ ಗುರಿ ಇದೆ. ಅದು ಸಹ ನಮ್ಮ ಉತ್ತರ ಕರ್ನಾಟಕದ ನೆಲದಲ್ಲೇ ಎಂದು ಹೆಮ್ಮೆಯಿಂದ ಹೇಳುತ್ತೇವೆ
- ಸಂತೋಷ್ ಜಿ., ನಿರ್ದೇಶಕರು

``ರೈತ ಇನ್ನಿಲ್ಲ' ಕಿರುಚಿತ್ರ ವೀಕ್ಷಿಸಿ: https://www.youtube.com/watch?v=sODDw2yJ0IQ
ರೈತರ ಬವಣೆ ತೆರೆದಿಡುವ ‘ರೈತ ಇನ್ನಿಲ್ಲ’ ಕಿರುಚಿತ್ರ ರೈತರ ಬವಣೆ ತೆರೆದಿಡುವ ‘ರೈತ ಇನ್ನಿಲ್ಲ’ ಕಿರುಚಿತ್ರ Reviewed by MediaMind24x7 Team on March 06, 2018 Rating: 5

No comments:

Powered by Blogger.